24/3/12

ನಮ್ಮವರೇಕೆ ಹೀಗಾದರು?

ಆರೇಳು ವರ್ಷಗಳ ಹಿಂದಿನ ಮಾತು. ರಷ್ಯಾದಲ್ಲಿ ಶಾಲಾ ಮಕ್ಕಳ ವಾಹನವನ್ನು ಚೆಚೆನ್ಯಾ ಬಂಡುಕೋರರು ಅಪಹರಿಸಿದ್ದರು. ಈ ಘಟನೆ ಅಂತರಾಷ್ಟ್ರೀಯವಾಗಿ ಗಮನ ಸೆಳೆದಿತ್ತು. ಬಂಡುಕೋರರ ಗುಂಪು ಒತ್ತೆಯಾಳುಗಳ ಬಿಡುಗಡೆಗೆ ಅನೇಕ ಬೇಡಿಕೆಗಳನ್ನು ರಷ್ಯಾ ಸರ್ಕಾರದ ಮುಂದೆ ಇಟ್ಟಿತ್ತು . ಅವರ ಬೇಡಿಕೆಗಳಿಗೆ ರಷ್ಯಾ ಮಣಿದಿದ್ದರೆ ಒಂದು ದೊಡ್ಡ ಅಪಮಾನಕ್ಕೆ ಗುರಿಯಾಗಿ ಬಿಡುತಿತ್ತು. ಆದರೆ ಅಲ್ಲಿನ ಪ್ರಜೆಗಳು ಅದಕ್ಕೆ ಆಸ್ಪದ ನೀಡಲಿಲ್ಲ. ಅಪಹರಣಕ್ಕೆ ಒಳಗಾದವರ ಬಂಧುಗಳು ತನ್ನ ದೇಶ ನಮ್ಮ ಸಂಬಂಧಿಕರಿಗಾಗಿ ಬಂಡುಕೋರರ ಮುಂದೆ ತಲೆಬಾಗಬಾರದು ಎಂಬ ಅಭಿಪ್ರಾಯ ನೀಡಿದ್ದರು. ಪ್ರಜೆಗಳು ನೀಡಿದ ನೈತಿಕ ಬೆಂಬಲದಿಂದ ಮುನ್ನುಗ್ಗಿದ ರಷ್ಯಾ ಸೇನೆ ಮೂರುದಿನದಲ್ಲಿ ತನ್ನ ಕಾರ್ಯಾಚರಣೆ ಮುಗಿಸಿ ಒತ್ತೆಯಾಳುಗಳನ್ನು ಬಿಡಿಸಿತು.ಕೆಲವು ಒತ್ತೆಯಾಳುಗಳು ಸಾವನ್ನಪ್ಪಿದರು.ಆದರೂ ಈಡೀ ವಿಶ್ವದ ಮುಂದೆ ರಷ್ಯಾ ತನ್ನ ಘನತೆಯನ್ನು ಉಳಿಸಿಕೊಂಡಿತ್ತು.
                        ಇದೇ ರೀತಿಯ ಘಟನೆ ೧೯೯೯ರಲ್ಲಿ ಭಾರತದಲ್ಲಿಯೂ ನಡೆದಿತ್ತು.ನೇಪಾಳದಿಂದ ನಮ್ಮ ವಿಮಾನವನ್ನು ಅದರಲ್ಲಿದ್ದ ೧೭೬ ಪ್ರಯಾಣಿಕರೊಂದಿಗೆ ಅಪಹರಿಸಲಾಯಿತು. ಮೊದಲಿಗೆ ಇಂಧನಕ್ಕಾಗಿ ನಮ್ಮ ನೆಲದಲ್ಲಿಯೇ ಅದನ್ನು ಇಳಿಸಲಾಯಿತು. ನಂತರ ಪಾಕಿಸ್ತಾನ ಅಲ್ಲಿಂದ ಅಫ್ಘಾನಿಸ್ತಾನಕ್ಕೆ ಅದನ್ನು ತೆಗೆದುಕೊಂಡು ಹೋಗಲಾಯಿತು. ವಿಮಾನ ಹಾಗು ಅದರಲ್ಲಿದ್ದ ಪ್ರಯಾಣಿಕರ ಬಿಡುಗಡೆಗೆ ಅಪಹರಣಕಾರರು ಇಟ್ಟಬೇಡಿಕೆ, ಭಾರತದ ಸೆರೆಯಲ್ಲಿದ್ದ ಮೂವರು ಖತರ್ನಾಕ್ ಉಗ್ರರ ಬಿಡುಗಡೆ. ಮೌಲಾನ ಮಸೂದ್ ಅಜರ್, ಅಹ್ಮೆದ್ ಒಮರ್ ಸಹೀದ್ ಶೇಕ್, ಮುಷ್ತಾಕ್ ಅಹ್ಮೆದ್ ಜರ್ಗರ್ ಇವರುಗಳ ಬಿಡುಗಡೆಗೆ ಅವರು ಬೇಡಿಕೆ ಇಟ್ಟಿದ್ದರು. ಇದು ಯಾವುದೇ ಸಾರ್ವಭೌಮತ್ವ ಹೊಂದಿದ, ರಕ್ಷಣೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳದ ರಾಷ್ಟ್ರಕ್ಕೆ ಅಸಾಧ್ಯವಾದ ಮಾತು. ಆದರೆ ಭಾರತ ಸರ್ಕಾರದ ಮೇಲೆ ಅಪಹೃತರ ಸಂಬಂಧಿಕರು ಎಂತಹ ಒತ್ತಡ ಹೇರಿದರೆಂದರೆ, ಸ್ವತಃ ಅಂದಿನ ಭಾರತದ ವಿದೇಶಾಂಗ ಮಂತ್ರಿ ಜಸ್ವಂತ್ ಸಿಂಗ್ ವಿಮಾನದಲ್ಲಿ ಮೂವರು ಉಗ್ರರನ್ನು ಕೂಡಿಸಿಕೊಂಡು ಹೋಗಿ,ಅವರನ್ನು ಅಪಹರಣಕಾರರಿಗೆ ಒಪ್ಪಿಸಿ, ಅಪಹೃತ ವಿಮಾನವನ್ನು ಹಾಗು ಅದರಲ್ಲಿದ್ದ  ಪ್ರಯಾಣಿಕರನ್ನು ಬಿಡಿಸಿಕೊಂಡು ಬಂದಿದ್ದರು. ಅಂದು ವಿಶ್ವದ ಯಾವುದೇ ದೇಶ ಭಾರತದ ಸಹಾಯಕ್ಕೆ ನಿಂತಿರಲಿಲ್ಲ (ಆ ಕಾಲದಲ್ಲಿ ಅಮೇರಿಕದ ಶ್ರೀರಕ್ಷೆ ಆಫ್ಘಾನಿಸ್ತಾನದ ಮೇಲಿತ್ತು).ಅಂತಹ ಸಂದರ್ಭದಲ್ಲಿ ಭಾರತದ ನಾಗರೀಕರು ಸಹ ಭಾರತ ಸರ್ಕಾರದ ಪರವಾಗಿ ನಿಂತು ಮುಂದಿನ ಕಾರ್ಯಾಚರಣೆ ನಡೆಸಲು ಧೈರ್ಯ ತುಂಬಲಿಲ್ಲ.ಬದಲಾಗಿ ಮೂವರು ಉಗ್ರರನ್ನು ಬಿಡುಗಡೆಗೊಳಿಸಿ ನಮ್ಮವರನ್ನು ಕರೆತರಲು ಸರ್ಕಾರದ ಮೇಲೆ ಒತ್ತಡ ಹೇರಿದರು.ನಮ್ಮ  ಸರ್ಕಾರ  ಹಾಗೆಯೇ ಮಾಡಿತು ಕೂಡ. ಕೊನೆಗೆ ಅಪಹೃತರಲ್ಲಿ ಒಬ್ಬಾತನನ್ನು ಹೊರತುಪಡಿಸಿ ಎಲ್ಲರೂ ಸುರಕ್ಷಿತವಾಗಿ ವಾಪಾಸ್ಸಾದರು. ಆದರೆ ಭಾರತದ ಮರ್ಯಾದೆ ಮಣ್ಣುಪಾಲಾಗಿತ್ತು. ಬಹುಶಃ ಬಾಂಗ್ಲದೇಶದಂತಹ ರಾಷ್ಟ್ರವೂ ತೆಗೆದುಕೊಳ್ಳದ ದುರ್ಬಲ ನಿರ್ಧಾರವನ್ನು ಭಾರತದಂತಹ ಶಕ್ತಿಶಾಲಿ ರಾಷ್ಟ್ರ ತೆಗೆದುಕೊಂಡಿತ್ತು.

                     ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳ ಅಭಿಪ್ರಾಯಗಳಿಗೆ ಸರಕಾರಗಳು ತಲೆಬಾಗಲೇಬೇಕು.ಇದು ಖಂಡಿತವಾಗಿಯೂ ಒಳ್ಳೆಯ ವ್ಯವಸ್ಥೆ. ಆದರೆ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಇದೆ ಎಂಬ ಕಾರಣಕ್ಕಾಗಿ ಪ್ರಜ್ಞಾಹೀನರಂತೆ ವರ್ತಿಸುವುದಲ್ಲ. ದುರಾದೃಷ್ಟವಶಾತ್ ಮೇಲಿನ ಪ್ರಕರಣದಲ್ಲಿ ಆದದ್ದೇ ಅದು.೧೭೬ ಜನರ ಜೀವ ನಿಜಕ್ಕೂ ಅಮೂಲ್ಯ. ಅವರನ್ನು ಬಿಡುಗಡೆ ಮಾಡಿಸಲು ಸರ್ಕಾರ ನಿಜಕ್ಕೂ ಪ್ರಯತ್ನಿಸಬೇಕಾಗಿತ್ತು. ಆದರೆ ೩ ಜನ ಅಂತರಾಷ್ಟ್ರೀಯ ಉಗ್ರರನ್ನು ಬಿಡುಗಡೆ ಗೊಳಿಸುವ ಮೂಲಕ ಅಲ್ಲ. ಬದಲಾಗಿ ಅಪಹರಣಕಾರರ ಸೊಂಟ ಮುರಿದು ನಮ್ಮವರನ್ನು ಬಿಡಿಸಿತರಬೇಕಿತ್ತು. ಹಾಗೇ ಮಾಡಿದ್ದರೆ ನಮ್ಮ ದೇಶದ ವಿಮಾನಗಳ ಕಡೆಗೆ ದೃಷ್ಟಿ ಹಾಯಿಸುವ ಸಾಹಸವನ್ನು ಉಗ್ರರು ಎಂದಿಗೂ ಮಾಡುತ್ತಿರಲಿಲ್ಲ. ಇನ್ನೊಂದು ದೇಶದೊಳಗೆ ನುಗ್ಗಿ ಕಾರ್ಯಾಚರಣೆ ನಡೆಸುವುದು ಕಷ್ಟದ ಕೆಲಸವೇ. ಆದರೆ ಭಾರತದಂತಹ ದೇಶಕ್ಕೆ ಅದು ಖಂಡಿತ ಅಸಾಧ್ಯದ ಕೆಲಸವಲ್ಲ.ಆದರೆ ಅಪಹೃತರ ಒತ್ತಡಕ್ಕೆ ಮಣಿದ ಸರ್ಕಾರ ಆ ಕೆಲಸ ಮಾಡಲೇಇಲ್ಲ.  ಪ್ರಜೆಗಳ ಮುಲಾಜಿಗೆ ಬಿದ್ದ ಸರ್ಕಾರ ಅತ್ಯಂತ ಅಪಾಯಕಾರಿ ಉಗ್ರರನ್ನು ಬಿಡುಗಡೆಗೊಳಿಸಿತು. ಅದರ ಪರಿಣಾಮವನ್ನು ಭಾರತ ನಿರಂತರವಾಗಿ ಅನುಭವಿಸುತ್ತ ಬಂದಿತು.ನಂತರದ ದಿನಗಳಲ್ಲಿ ಈ ಮೂವರು ಉಗ್ರರ ನೇತೃತ್ವದಲ್ಲಿ ಭಾರತದಾದ್ಯಂತ ಉಗ್ರರು ಹಿಂಸಾಚಾರ ನಡೆಸಿದರು. ಅದರಲ್ಲೂ ೨೦೦೮ ರಲ್ಲಿ ಮುಂಬೈಮೇಲೆ ನಡೆದ ದಾಳಿಯಲ್ಲಿ ಸುಮಾರು ಮುನ್ನೂರು ಅಮಾಯಕರು ಸಾವನಪ್ಪಿದರು. ಈ ದಾಳಿಯ ಮಾಸ್ಟರ್ ಮೈಂಡ್ ೧೯೯೯ ರಲ್ಲಿ ಭಾರತದಿಂದ ಬಿಡುಗಡೆಯಾದ ಮೌಲಾನ ಮಸೂದ್ ಅಜರ್ ಎಂದು ತಿಳಿದುಬಂದಿದೆ. ಈಗ ಹೇಳಿ ಅಂದು ಅಪಹೃತರ ಸಂಬಂಧಿಗಳು ನಮ್ಮ ಸಂಬಂಧಿಕರಿಗಾಗಿ ನಮ್ಮ ದೇಶ ಉಗ್ರರ ಮುಂದೆ ತಲೆಬಾಗಬಾರದು ಎಂಬ ನಿಲುವು ತಳೆದಿದ್ದರೆ, ಸಾವಿರಾರು ಜನರ ಪ್ರಾಣ ಉಳಿದಿರುತ್ತಿತ್ತು. ದೇಶದ ಮರ್ಯಾದೆ ಉಳಿದಿರುತ್ತಿತ್ತು. ರಷ್ಯಾಗಿಂತ ನಾವೇಕೆ ಹಿಂದೆ ಇದ್ದೇವೆ ಗೊತ್ತೇ? ನಮ್ಮ ಪ್ರಜೆಗಳು ಇನ್ನೂ ರಷ್ಯಾದ ಪ್ರಜೆಗಳಷ್ಟು ಪ್ರಬುದ್ಧರಾಗಿಲ್ಲ. ದೇಶದ ಮಾನ-ಮರ್ಯಾದೆ ಕೊಚ್ಚಿಕೊಂಡು ಹೋದರೂ ಪರವಾಗಿಲ್ಲ, ನಮ್ಮ ಬೇಳೆ ಬೆಂದರೆ ಸಾಕು ಎಂಬ ಜಾಯಮನದವರೇ ನಮ್ಮಲ್ಲಿ ಹೆಚ್ಚು. ಪ್ರಾಣಕ್ಕಿಂತ ದೇಶ ಹೆಚ್ಚು ಎಂಬ ತತ್ವದಲ್ಲಿ ಬೆಳೆದುಬಂದಿದ್ದ ನಮ್ಮವರೇಕೆ ಹೀಗಾದರು?
                          

ಸತ್ತರೆ ಸಾಯಬೇಕು ಇವರ ಹಾಗೆ...

 ಪೂರ್ಣ ಸ್ವರಾಜ್ಯದ ಕನಸಿನೊಂದಿಗೆ ಹೋರಾಟ ಆರಂಭಿಸಿ, ಅದೇ ಕನಸಿನ ನಿರೀಕ್ಷೆಯಲ್ಲಿ ಭಗತ್ ಸಿಂಗ್, ಸುಖದೇವ್, ರಾಜಗುರು ಗಲ್ಲಿಗೆ ಏರಿ ಇಂದಿಗೆ ೮೧ ವರುಷಗಳು ತುಂಬಿದೆ. ಸಾಮಾನ್ಯರು ಸಾವಿನೊಂದಿಗೆ ಜೀವನವನ್ನು ಅಂತ್ಯಗೊಳಿಸುತ್ತಾರೆ, ಆದರೆ ವೀರರಿಗೆ ಸಾವು ಮರುಹುಟ್ಟು. ಹಾಗಾಗಿಯೇ ಇಂದಿಗೂ ಭಗತ್ ಸಿಂಗ್, ಸುಖದೇವ್, ರಾಜಗುರು ನಮ್ಮ ನೆನಪಿನಲ್ಲಿ ಜೀವಂತವಾಗಿರುವುದು. ಇಂಕ್ವಿಲಾಬ್  ಜಿಂದಾಬಾದ್  ಎಂಬ ಘೋಷಣೆಯೊಂದಿಗೆ ಪ್ರಾಣಬಿಟ್ಟಾಗ ಇವರುಗಳಿಗೆ ಸುಮಾರು ೨೪ ವರ್ಷ. ದೇಶದ ಸ್ವತಂತ್ರದ ವಿಚಾರದಲ್ಲಿ ಬ್ರಿಟೀಷರ ಮುಂದೆ ಕುಳಿತು ಅಂದಿನ ತಲೆ ನೆರೆತ ನಾಯಕರು ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದ  ಕಾಲದಲ್ಲಿ, ದೇಶದ ವಿಚಾರದಲ್ಲಿ ಯಾವ ರಾಜಿಗೂ ಒಪ್ಪದ ಯುವ ಸಮುದಾಯ ಪ್ರತ್ಯೇಕ ಹೋರಾಟ ಪ್ರಾರಂಭಿಸಿತ್ತು. ಈ ಹೋರಾಟಗಳನ್ನು ಉಗ್ರವಾದ ಎಂದು ಕೆಲವರು ಹೀಗಳೆಯುತ್ತಿದ್ದರು. ಆಗ ಇಡೀ ದೇಶಕ್ಕೆ ತಮ್ಮ ಹೋರಾಟದ ಉದ್ದೇಶಗಳ ಅರಿವು ಮೂಡಿಸಲು ಪ್ರಾಣವನ್ನೇ ಮುಡಿಪಾಗಿರಿಸಿ ಗೆದ್ದವರು ಇವರುಗಳು .ಭಗತ್ ಸಿಂಗ್ ಅಂದು ಪೂರ್ಣ ಸ್ವರಾಜ್ಯದ ವಿಚಾರವನ್ನು ಪ್ರತಿಪಾದಿಸದೇ ಇದ್ದಿದ್ದರೇ, ನಮ್ಮ ದೇಶ ಇನ್ನೇಷ್ಟು ಭಾಗಗಳಾಗಿ ಹಂಚಿ ಹೋಗಿರುತ್ತಿತ್ತೋ? ಅವರ ಇಂತಹ ವಿಚಾರಗಳಿಗೆ ಮಾರುಹೋಗಿ ಎಲ್ಲಿ ಕಾಂಗ್ರೆಸ್ಸಿನಲ್ಲಿದ್ದ ಯುವಕರು ಅತ್ತ ಕಡೆ ವಾಲುತ್ತಾರೋ ಎಂದು ಹೆದರಿ ತರಾತುರಿಯಲ್ಲಿ, ಲಾಹೋರ್ ಅಧಿವೇಶನವನ್ನು ಕರೆದು ಪೂರ್ಣ ಸ್ವರಾಜ್ಯದ ಬೇಡಿಕೆಯನ್ನು ಇಡಲಾಯಿತು. ಒಂದು ಕಡೆ ಈ ಯುವ ಹೋರಾಟಗಾರರನ್ನು ಹೀಗಳೆಯುತ್ತ, ಮತ್ತೊಂದು ಕಡೆಯಿಂದ ಇವರದೇ ಆದರ್ಶಗಳನ್ನು ಹೈಜಾಕ್  ಮಾಡಿತ್ತು ಕಾಂಗ್ರೆಸ್.
ಭಗತ್ ಸಿಂಗ್ , ಸುಖದೇವ್,ರಾಜಗುರು ಬದುಕಿದ್ದದ್ದು ಕೆಲವೇ ವರ್ಷಗಳು ಮಾತ್ರ. ಆದರೂ ತಮ್ಮ ನಾಲ್ಕನೇ ತಲೆಮಾರಿಗೂ ಆದರ್ಶ ಪ್ರಾಯರಾಗಿದ್ದಾರೆ. ಎಂದೋ ಬರುವ ಸಾವಿಗೆ, ಇಂದೇ ಹೆದರಿಕೊಂಡು ಕೂರುವ ಜನರ ನಡುವೆ ಸಾವನ್ನೇ ಅಪ್ಪಿಕೊಂಡ ಸಾಹಸಿಗಳು ತುಂಬಾ ವಿಭಿನ್ನ. ದೇಶಕ್ಕಾಗಿ ನಗುನಗುತ್ತ ಪ್ರಾಣಬಿಟ್ಟ ಭಗತ್ ಸಿಂಗ್, ಸುಖದೇವ್, ರಾಜಗುರು, ನಿಮಗಿದೋ ಕೋಟಿ ಸಲಾಂ....